ಕ್ಯಾಪ್ಟನ್ ಮನೋಜ್ ಕುಮಾರ್ ಪಾಂಡೆ, (೨೫ ಜೂನ್ ೧೯೭೫ - ೩ ಜುಲೈ ೧೯೯೯), ೧ ನೇ ಬೆಟಾಲಿಯನ್‌ನ ಭಾರತೀಯ ಸೇನಾಧಿಕಾರಿಯಾಗಿದ್ದರು. ೧೧ ಗೂರ್ಖಾ ರೈಫಲ್ಸ್ ಮರಣೋತ್ತರವಾಗಿ ಭಾರತದ ಅತ್ಯುನ್ನತ ಮಿಲಿಟರಿ ಗೌರವವಾದ ಪರಮ ವೀರ ಚಕ್ರವನ್ನು ೧೯೯೯ ರಲ್ಲಿ ಕಾರ್ಗಿಲ್ ಯುದ್ಧದಲ್ಲಿ ಇವರ ಧೈರ್ಯ ಮತ್ತು ನಾಯಕತ್ವಕ್ಕಾಗಿ ನೀಡಿದರು. ಕಾರ್ಗಿಲ್‌ನ ಬಟಾಲಿಕ್ ಸೆಕ್ಟರ್‌ನಲ್ಲಿ ಖಲುಬರ್ ಬೆಟ್ಟದ ಜುಬರ್ ಟಾಪ್ ಮೇಲೆ ನಡೆದ ದಾಳಿಯಲ್ಲಿ ಇವರು ಸಾವನ್ನಪ್ಪಿದರು. == ಜೀವನ == ಮನೋಜ್ ಕುಮಾರ್ ಪಾಂಡೆ ಅವರು ಜೂನ್ ೨೫ ೧೯೭೫ ರಂದು ಭಾರತದ, ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ರುಧಾ ಎಂಬ ಗ್ರಾಮದಲ್ಲಿ ಜನಿಸಿದರು. ಇವರ ತಂದೆಯ ಹೆಸರು ಗೋಪಿ ಚಂದ್ ಪಾಂಡೆ. ಹಾಗೂ ತಾಯಿಯ ಹೆಸರು ಮೋಹಿನಿ. ಇವರು ಲಕ್ನೋನ, ಉತ್ತರ ಪ್ರದೇಶ ಸೈನಿಕ್ ಶಾಲೆ ಮತ್ತು ರಾಣಿ ಲಕ್ಷ್ಮಿ ಬಾಯಿ ಸ್ಮಾರಕ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಶಿಕ್ಷಣ ಪಡೆದರು. ಬಾಕ್ಸಿಂಗ್ ಮತ್ತು ಬಾಡಿ ಬಿಲ್ಡಿಂಗ್‌ನಲ್ಲಿ ಇವರು ತೀವ್ರವಾದ ಆಸಕ್ತಿಯನ್ನು ಹೊಂದಿದ್ದರು. ೧೯೯೦ ರಲ್ಲಿ ಉತ್ತರ ಪ್ರದೇಶದ ನಿರ್ದೇಶನಾಲಯದ ಕಿರಿಯ ವಿಭಾಗದ ಎನ್‌ಸಿಸಿಯ ಅತ್ಯುತ್ತಮ ಕೆಡೆಟ್‌ ಆಗಿ ಇವರನ್ನು ಆಯ್ಕೆ ಮಾಡಲಾಯಿತು. ಅವರ ಆಯ್ಕೆಗೆ ಮೊದಲು, ಅವರ ಸರ್ವೀಸಸ್ ಸೆಲೆಕ್ಷನ್ ಬೋರ್ಡ್ (ಎಸ್ಎಸ್‍ಬಿ) ಸಂದರ್ಶನದ ಸಮಯದಲ್ಲಿ, ಸಂದರ್ಶಕರು ಅವರನ್ನು,ನೀವು ಸೈನ್ಯಕ್ಕೆ ಸೇರಲು ಏಕೆ ಬಯಸುತ್ತೀರಿ? ಎಂದು ಕೇಳಿದಾಗ ಅವರು ತಕ್ಷಣ ನಾನು ಪರಮ ವೀರ ಚಕ್ರವನ್ನು ಗೆಲ್ಲಲು ಬಯಸುತ್ತೇನೆ ಎಂದು ಉತ್ತರಿಸಿದರು. ಕ್ಯಾಪ್ಟನ್ ಮನೋಜ್ ಕುಮಾರ್ ಪಾಂಡೆ ಅವರಿಗೆ ಮರಣೋತ್ತರವಾಗಿ ದೇಶದ ಅತ್ಯುನ್ನತ ಶೌರ್ಯ ಪ್ರಶಸ್ತಿ ಲಭಿಸಿದೆ. == ಮಿಲಿಟರಿ ಸೇವೆ == ಇವರು ೯೦ ನೇ ಕೋರ್ಸ್‌ನಲ್ಲಿ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಿಂದ ಪದವಿ ಪಡೆದರು ಮತ್ತು ಮೈಕ್ ಸ್ಕ್ವಾಡ್ರನ್ (ಮಸ್ಟ್ಯಾಂಗ್ಸ್)ಗೆ ಸೇರಿದರು. ಪಾಂಡೆ ಅವರನ್ನು ೭ ಜೂನ್ ೧೯೯೭ ರಂದು ೧೧ ನೇ ಗೂರ್ಖಾ ರೈಫಲ್ಸ್‌ನ ೧ ನೇ ಬೆಟಾಲಿಯನ್‌ನಲ್ಲಿ ಲೆಫ್ಟಿನೆಂಟ್ ಆಗಿ ನಿಯೋಜಿಸಲಾಯಿತು. === ಕಾರ್ಗಿಲ್ ಯುದ್ಧ === ಮೇ ಆರಂಭದಲ್ಲಿ, ಕಾರ್ಗಿಲ್ ವಲಯದಲ್ಲಿ ಒಳನುಸುಳುವಿಕೆ ವರದಿಯಾಗಿತ್ತು. ೧/೧೧ ಗೂರ್ಖಾ ರೈಫಲ್ಸ್ ಬೆಟಾಲಿಯನ್, ಸಿಯಾಚಿನ್ ಹಿಮನದಿಯಲ್ಲಿ ಒಂದೂವರೆ ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿತ್ತು ಮತ್ತು ಪುಣೆಯ ಶಾಂತಿ-ಸಮಯದ ಸ್ಥಳಕ್ಕೆ ತೆರಳುತ್ತಿತ್ತು. ಕಾರ್ಗಿಲ್‍ನ ಬಟಾಲಿಕ್ ಸೆಕ್ಟರ್‌ಗೆ ತೆರಳಲು ಬೆಟಾಲಿಯನ್‍ಗೆ ತಿಳಿಸಲಾಯಿತು. ಇದು ಈ ವಲಯಕ್ಕೆ ಸೇರ್ಪಡೆಗೊಂಡ ಮೊದಲ ಘಟಕಗಳಲ್ಲಿ ಒಂದಾಗಿದೆ. ಕರ್ನಲ್ ಲಲಿತ್ ರಾಯ್ ನೇತೃತ್ವದ ಈ ಘಟಕಕ್ಕೆ ಜುಬರ್, ಕುಕರ್ತನ್ ಮತ್ತು ಖಲುಬರ್ ಪ್ರದೇಶಗಳ ಜವಾಬ್ದಾರಿಯನ್ನು ವಹಿಸಲಾಯಿತು ಮತ್ತು ಅವರ ಬೆಟಾಲಿಯನ್ ಪ್ರಧಾನ ಕಚೇರಿ ಯೆಲ್ಡೋರ್‌ನಲ್ಲಿತ್ತು. ಪಾಂಡೆಯವರು, ಬೆಟಾಲಿಯನ್‍ನ ಭಾಗವಾಗಿ, ಧೈರ್ಯದಿಂದ ಸರಣಿ ದಾಳಿಗಳಲ್ಲಿ ಭಾಗಿಯಾಗಿದ್ದರು. ಜುಬರ್ ಟಾಪ್ ಅನ್ನು ವಶಪಡಿಸಿಕೊಳ್ಳಲು ಕಾರಣವಾದ ಸರಣಿ ದಾಳಿಗಳಲ್ಲಿ ಅವರು ಭಾಗವಹಿಸಿದರು. ಮನೋಜ್ ಪಾಂಡೆ ಶತ್ರುಗಳನ್ನು ಸೋಲಿಸಿ ಡ್ರಾಸ್ ಕಣಿವೆಯನ್ನು ಭದ್ರಪಡಿಸಿಕೊಳ್ಳಲು ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು. === ಪರಮ ವೀರ ಚಕ್ರ === ಜುಲೈ ಆರಂಭದಲ್ಲಿ, ೧/೧೧ ಜಿಆರ್ ನ 'ಬಿ' ಕಂಪನಿಗೆ ಖಲುಬರ್ ಟಾಪ್ ಅನ್ನು ವಶಪಡಿಸಿಕೊಳ್ಳುವ ಕಾರ್ಯವನ್ನು ವಹಿಸಲಾಯಿತು. ಪಾಂಡೆ ಈ ಕಂಪನಿಯಲ್ಲಿ ಒಂದು ಸೈನ್ಯದ ಕಮಾಂಡರ್ ಆಗಿದ್ದರು. ಇವರು ಪರಿಸ್ಥಿತಿಯನ್ನು ತ್ವರಿತವಾಗಿ ಹದಗೆಡಿಸಿದ ಇಬ್ಬರು ಶತ್ರು ಸಿಬ್ಬಂದಿಯನ್ನು ಕೊಂದರು ಮತ್ತು ಇನ್ನೂ ಇಬ್ಬರನ್ನು ಕೊಲ್ಲುವ ಮೂಲಕ ಎರಡನೇ ಸ್ಥಾನವನ್ನು ನಾಶಪಡಿಸಿದನು. ಭುಜ ಮತ್ತು ಕಾಲಿಗೆ ಗಾಯವಾಗಿದ್ದರೂ, ಇವರು ಶತ್ರುಗಳನ್ನು ಎದುರಿಸಿದರು. ತನ್ನ ಘೋರ ಗಾಯಗಳನ್ನು ಗಮನಿಸದೆ, ಇವರು ತಮ್ಮ ಸಹ ಸೈನಿಕರನ್ನು ಒತ್ತಾಯಿಸಿ ಬಂಕರ್‌ನಿಂದ ಬಂಕರ್‌ಗೆ ಧಾವಿಸಿದರು. ಎರಡೂ ಸೈನ್ಯಗಳು ಕ್ರೂರವಾದ, ಕೈ-ಕೈ ಯುದ್ಧದಲ್ಲಿ ತೊಡಗಿದ್ದವು. ಸೈನಿಕರು ಶತ್ರುಗಳ ಮೇಲೆ ದಾಳಿ ಮಾಡಿ ಅವರ ಮೇಲೆ ಬಿದ್ದರು. ತನ್ನ ಗಂಭೀರ ಗಾಯಗಳ ಬಗ್ಗೆ ತಲೆಕೆಡಿಸಿಕೊಳ್ಳದೆ, ಅವರು ನಾಲ್ಕನೇ ಸ್ಥಾನದ ಮೇಲೆ ದಾಳಿಯನ್ನು ಮುಂದುವರಿಸಿದರು ಮತ್ತು ಅವರ ಹಣೆಯ ಮೇಲೆ ಮಾರಣಾಂತಿಕ ಸ್ಫೋಟವಾಗಿದ್ದರೂ ಸಹ ಗ್ರೆನೇಡ್‍ನಿಂದ ಅದನ್ನು ನಾಶಪಡಿಸಿದರು. ಅವರು ಅಂತಿಮ ಬಂಕರ್‌ನಲ್ಲಿ ಕುಸಿದು ಬಿದ್ದು ಗಾಯಗೊಂಡರು. === ಶೌರ್ಯ ಪ್ರಶಸ್ತಿ ಪ್ರದಾನ ಸಮಾರಂಭ === ಯುದ್ಧ ಮುಗಿದ ಒಂದು ತಿಂಗಳ ನಂತರ, ೧೯೯೯ ರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ಭಾರತದ ರಾಷ್ಟ್ರಪತಿಗಳು ಪಾಂಡೆ ಮತ್ತು ಇತರ ಮೂವರಾದ ಕ್ಯಾಪ್ಟನ್ ವಿಕ್ರಮ್ ಬಾತ್ರಾ, ರೈಫಲ್‌ಮ್ಯಾನ್ ಸಂಜಯ್ ಕುಮಾರ್ ಮತ್ತು ಗ್ರೆನೇಡಿಯರ್ ಯೋಗೇಂದ್ರ ಸಿಂಗ್ ಯಾದವ್ ಅವರಿಗೆ ಪರಮ ವೀರ ಚಕ್ರವನ್ನು ನೀಡಲು ಅನುಮೋದನೆ ನೀಡಿದರು. ಜನವರಿ ೨೬, ೨೦೦೦ ರಂದು ನವದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಅವರ ತಂದೆ ಗೋಪಿಚಂದ್ ಪಾಂಡೆ ಅವರು ಭಾರತದ ರಾಷ್ಟ್ರಪತಿ ಕೆ. ಆರ್. ನಾರಾಯಣನ್ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು. == ಗೌರವಗಳು == ಭಾರತದ ಅತ್ಯುನ್ನತ ಮಿಲಿಟರಿ ಗೌರವವನ್ನು ಪಡೆದ ೨೧ ವ್ಯಕ್ತಿಗಳಲ್ಲಿ ಪಾಂಡೆ ಕೂಡ ಒಬ್ಬರು. ಪರಮ ವೀರ ಚಕ್ರ ಪ್ರಶಸ್ತಿ ಪುರಸ್ಕೃತರಾಗಿ, ಅವರ ಪ್ರತಿಮೆ ರಾಷ್ಟ್ರೀಯ ಯುದ್ಧ ಸ್ಮಾರಕದ ಪರಮ್ ಯೋಧಾ ಸ್ಥಳದಲ್ಲಿದೆ. ಅವರ ಮರಣದ ನಂತರ, ಅವರು ಕಲಿತ ಶಾಲೆ ಸೇರಿದಂತೆ ಅನೇಕ ಸ್ಥಳಗಳಿಗೆ ಅವರ ಹೆಸರನ್ನು ಇಡಲಾಗಿದೆ. ರಾಣಿ ಲಕ್ಷ್ಮಿ ಬಾಯಿ ಮೆಮೋರಿಯಲ್ ಸೀನಿಯರ್ ಸೆಕೆಂಡರಿ ಶಾಲೆ ಇಲ್ಲಿ ಅವರ ಹೆಸರಿನಲ್ಲಿ ಸಭಾಂಗಣವನ್ನು ನಿರ್ಮಿಸಲಾಗಿದೆ, ಅದನ್ನು ಅವರ ಪೋಷಕರು ಉದ್ಘಾಟಿಸಿದರು. ಯುಪಿ ಸೈನಿಕ್ ಶಾಲೆ ಪಾಂಡೆ ಅವರು ಕಲಿತ ಶಾಲೆಯಾದ ಲಕ್ನೋದ ಉತ್ತರ ಪ್ರದೇಶ ಸೈನಿಕ್ ಶಾಲೆಗೆ ಇವರ ಹೆಸರನ್ನು ಮರುನಾಮಕರಣ ಮಾಡಲಾಯಿತು. ಇದನ್ನು ಈಗ ಕ್ಯಾಪ್ಟನ್ ಮನೋಜ್ ಕುಮಾರ್ ಪಾಂಡೆ ಯುಪಿ ಸೈನಿಕ್ ಶಾಲೆ, ಲಕ್ನೋ ಎಂದು ಕರೆಯಲಾಗುತ್ತದೆ. ಶಾಲೆಯ ಒಂದು ಸಭಾಂಗಣಕ್ಕೆ ಅವರ ಹೆಸರನ್ನು ಇಡಲಾಯಿತು. ಇದರ ಅಡಿಪಾಯವನ್ನು ಜನರಲ್ ವಿ. ಕೆ. ಸಿಂಗ್ ಅವರು ೨೦೧೧ ರಲ್ಲಿ ಹಾಕಿದರು. ದಿವಂಗತ ಕ್ಯಾಪ್ಟನ್ ಮನೋಜ್ ಕೆ. ಆರ್. ಪಾಂಡೆ ಪಿವಿಸಿ ಫುಟ್ಬಾಲ್ ಟೂರ್ನಮೆಂಟ್ ಟ್ರೋಫಿ ಎಂಬ ಅಂತರ-ಶಾಲಾ ಫುಟ್ಬಾಲ್ ಪಂದ್ಯಾವಳಿಯನ್ನು ಶಾಲೆಯು ವಾರ್ಷಿಕವಾಗಿ ನಡೆಸುತ್ತದೆ. ಮುಖ್ಯ ದ್ವಾರಕ್ಕೆ ಅವರ ಹೆಸರಿಡಲಾಯಿತು. ರಾಷ್ಟ್ರೀಯ ರಕ್ಷಣಾ ಅಕಾಡೆಮಿ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯು ವಿಜ್ಞಾನ ವಿಭಾಗವನ್ನು ಮನೋಜ್ ಪಾಂಡೆ ಬ್ಲಾಕ್ ಎಂದು ಹೆಸರಿಸಿತು. ಅವರ ಭಾವಚಿತ್ರವು ಅಕಾಡೆಮಿಯ ಮೈಕ್ ಸ್ಕ್ವಾಡ್ರನ್‍ನಲ್ಲಿ ನೇತಾಡುತ್ತಿದೆ. ಸರ್ವೀಸಸ್ ಸೆಲೆಕ್ಷನ್ ಬೋರ್ಡ್, ಅಲಹಾಬಾದ್ ಅಲಹಾಬಾದ್‌ನ ಸರ್ವೀಸಸ್ ಸೆಲೆಕ್ಷನ್ ಬೋರ್ಡ್‌ನಲ್ಲಿ ಕ್ಯಾಪ್ಟನ್ ಮನೋಜ್ ಅವರ ಹೆಸರಿನಲ್ಲಿ ಮನೋಜ್ ಪಾಂಡೆ ಬ್ಲಾಕ್ ಎಂಬ ಹೆಸರಿನ ಸಭಾಂಗಣವನ್ನು ನಿರ್ಮಿಸಲಾಗಿದೆ. ಕ್ಯಾಪ್ಟನ್ ಮನೋಜ್ ಪಾಂಡೆ ಸ್ಮಾರಕ ಕ್ರೀಡಾಂಗಣ, ಗಾರ್ಕಾನ್ ಕ್ಯಾಪ್ಟನ್ ಮನೋಜ್ ಪಾಂಡೆ ಕ್ರೀಡಾಂಗಣವು ಭಾರತದ ಕಾರ್ಗಿಲ್ ಜಿಲ್ಲೆಯ ಆರ್ಯನ್ ವ್ಯಾಲಿ ಬಟಾಲಿಕ್ ವಲಯದ ಗಾರ್ಕಾನ್ ಗ್ರಾಮದಲ್ಲಿರುವ ಒಂದು ಕ್ರೀಡಾ ಅಖಾಡವಾಗಿದೆ. ಪರಮ ವೀರ ಚಕ್ರವನ್ನು ಪಡೆದ ಭಾರತೀಯ ಸೇನಾಧಿಕಾರಿ ಕ್ಯಾಪ್ಟನ್ ಮನೋಜ್ ಕುಮಾರ್ ಪಾಂಡೆ ಅವರ ಶೌರ್ಯ ಮತ್ತು ರಾಷ್ಟ್ರದ ಬಗೆಗಿನ ಸಮರ್ಪಣೆಗೆ ಗೌರವಾರ್ಥವಾಗಿ ಈ ಕ್ರೀಡಾಂಗಣವನ್ನು ನಿರ್ಮಿಸಲಾಗಿದೆ. ಕ್ರೀಡಾಂಗಣವು ವಿವಿಧ ಕ್ರೀಡೆಗಳ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ ಮತ್ತು ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರಿಗೆ ಸ್ಥಳಾವಕಾಶ ಕಲ್ಪಿಸಲು ವಿನ್ಯಾಸಗೊಳಿಸಲಾಗಿದೆ. ಇದು ಕ್ಯಾಪ್ಟನ್ ಮನೋಜ್ ಕುಮಾರ್ ಪಾಂಡೆ ಮತ್ತು ಕಾರ್ಗಿಲ್ ಯುದ್ಧದ ಸಮಯದಲ್ಲಿ ದೇಶಕ್ಕಾಗಿ ಹೋರಾಡಿದ ಎಲ್ಲಾ ಧೈರ್ಯಶಾಲಿ ಸೈನಿಕರ ಅದಮ್ಯ ಉತ್ಸಾಹ ಮತ್ತು ತ್ಯಾಗದ ಸಂಕೇತವಾಗಿದೆ. ಈ ಕ್ರೀಡಾಂಗಣವು ಸಾರ್ವಜನಿಕರಿಗೆ ಮುಕ್ತವಾಗಿದೆ. ರಸ್ತೆಗಳು ಮತ್ತು ಕಟ್ಟಡಗಳು ಆರ್ಮಿ ವೆಲ್ಫೇರ್ ಹೌಸಿಂಗ್ ಆರ್ಗನೈಸೇಶನ್ (ಎಡಬ್ಲ್ಯುಎಚ್ಒ) ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯಲ್ಲಿ ನಿವೃತ್ತ ಯೋಧರಿಗಾಗಿ ಅಪಾರ್ಟ್ಮೆಂಟ್ ಸಂಕೀರ್ಣವನ್ನು ನಿರ್ಮಿಸಿದೆ ಮತ್ತು ಅದಕ್ಕೆ ಪಾಂಡೆ ಅವರ ಹೆಸರನ್ನು ಮನೋಜ್ ವಿಹಾರ್ ಎಂದು ಇಡಲಾಗಿದೆ. ಪುಣೆಯ ಕಾರ್ಡಿಯೋ ಥೊರಾಸಿಕ್ ಸೆಂಟರ್ (ಸಿಟಿಸಿ) ಆಸ್ಪತ್ರೆಯ ಬಳಿಯ ಸೇನಾ ವಸತಿಗೃಹಕ್ಕೆ ಹುತಾತ್ಮ ಕ್ಯಾಪ್ಟನ್ ಮನೋಜ್ ಪಾಂಡೆ ಅವರ ಹೆಸರನ್ನು ಕ್ಯಾಪ್ಟನ್ ಮನೋಜ್ ಪಾಂಡೆ ಎನ್ಕ್ಲೇವ್ ಎಂದು ಇಡಲಾಗಿದೆ. ಹುತಾತ್ಮ ಕ್ಯಾಪ್ಟನ್ ಮನೋಜ್ ಪಾಂಡೆ ಅವರ ಹೆಸರನ್ನು ಅವರ ತವರು ಜಿಲ್ಲೆ ಉತ್ತರ ಪ್ರದೇಶದ ಸೀತಾಪುರದ ಮತ್ತು ಲಕ್ನೋದ ಗೋಮತಿ ನಗರದ ಮಧ್ಯಭಾಗದಲ್ಲಿ ಕ್ಯಾಪ್ಟನ್ ಮನೋಜ್ ಪಾಂಡೆ ಚೌಕ್ ಎಂದು ಹೆಸರಿಸಲಾಗಿದೆ. ಡ್ರಾಸ್‌ನಲ್ಲಿರುವ ಕಾರ್ಗಿಲ್ ಯುದ್ಧ ವಸ್ತುಸಂಗ್ರಹಾಲಯದ ಗ್ಯಾಲರಿಗೆ ಅವರ ಹೆಸರಿಡಲಾಗಿದೆ. ಜನರಲ್ ಎಮ್. ಎಮ್. ನರವಾಣೆ ಅವರು ೨೦೨೧ ರ ಮಾರ್ಚ್ ೧೯ ರಂದು ಕ್ಯಾಪ್ಟನ್ ಮನೋಜ್ ಪಾಂಡೆ ಅವರ ಹುಟ್ಟೂರಾದ ರುಧಾದಲ್ಲಿ ಸ್ಮಾರಕವನ್ನು ಸಮರ್ಪಿಸಿದರು. ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ ಕೆಡೆಟ್‌ಗಳ ಮೆಸ್‌ಗೆ ಕ್ಯಾಪ್ಟನ್ ಮನೋಜ್ ಪಾಂಡೆ ಮೆಸ್ ಎಂದು ಹೆಸರಿಸಲಾಗಿದೆ. == ಜನಪ್ರಿಯ ಸಂಸ್ಕೃತಿಯಲ್ಲಿ == ಎಲ್ಒಸಿ: ಕಾರ್ಗಿಲ್ ಚಲನಚಿತ್ರದಲ್ಲಿ ಅಜಯ್ ದೇವಗನ್ ಮನೋಜ್ ಕುಮಾರ್ ಪಾಂಡೆ ಅವರ ಪಾತ್ರವನ್ನು ನಿರ್ವಹಿಸಿದ್ದಾರೆ. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಭಾರತೀಯ ಸೇನೆಯ ವೆಬ್‌ಪೇಜ್ ಮನೋಜ್ ಪಾಂಡೆ ಚೌಕ್ ಈ ನಿರ್ದೇಶಾಂಕದಲ್ಲಿದೆ 26°51′14″ 80°59′40″